ಭಾನುವಾರ, ಅಕ್ಟೋಬರ್ 11, 2015

"ನೇಹಿಗ"...

      "ನೇಹಿಗ"...

ಒಂದು ಹೆದ್ದಾರಿಯಾ ಬದಿಗೆ
ಮೈಚಾಚಿ ಮೆರೆಯುತ್ತಿತ್ತು ಅರಮನೆ..
ಮುಚ್ಚಿದಾ ಬಾಗಿಲ ಫಲಕದಾ ಮೇಲೆ
ಬರೆದಿತ್ತು..
ತಟ್ಟಬೇಡಿರಿ ಕದವ,ಭಿಕ್ಷುಕರು ನೀವು
ನನಗೆ ಸರಿಸಮರಲ್ಲ..

ದಾರಿಹೋಕನ ಧ್ಯಾನಕೀಗ
ಹೂಬಿಡುವ ಸಮಯ..
ಮಗ್ಗಲು ಬದಲಿಸಿತು
ಕುತೂಹಲದ ಖಯಾಲಿ..
ಬಾಗಿಲಿಗೆ ಬಂದು ದೂಡಿದೆ;
ತೆರೆದುಕೊಂಡಿತು,ಚಿಲಕ ಹಾಕಿರಲಿಲ್ಲ..

ಅತಿಥಿಯೆಂದು ನೀ ತುತ್ತನಿಡಲಿಲ್ಲ;
ನೀರ ಕರೆಯಿಲ್ಲ..
ಹಂಗೆಂದರೆ ನಾ ಮೆಟ್ಟಿದಾ ನೆಲ ಮಾತ್ರ..
ನೀನೆಸೆದ ತಾತ್ಸಾರಕೆ,ಹಂಚಿಕೊಳಬಲ್ಲೆ ನಾನು
ಜೀವ ತುಂಬಿದಾ ಒಲವ ನಗೆ ಜೇನು..

ದ್ವೇಷ ಮತ್ಸರ ಮೋಹದಾಸೆಗಳ ಸಂಗ್ರಾಮದಲಿ
ನಿನ್ನ ಹೃದಯದಾ ತುಂಬೆಲ್ಲ ಗೀರುಗಳು..
ಕೊಡಲೆಂದೇ ಬಂದಿಹೆ,ಅದಕೊಂದು ವಿನ್ಯಾಸ..
ನೀ ಬಯಸದಿದ್ದರೇನಂತೆ!..
ಅರ್ಥಗಟ್ಟೀತು ಬೆವರು,ಆವಿಯಾಗುವಾ ಮುನ್ನ..
ನಿನ್ನಲ್ಲೇ ತಂಗೀತು ತನಿಗಂಪು ರಸವು..

ಹಲವು ನದಿಗಳು ಸೇರದೇನೇ
ಹುಟ್ಟೀತು ಹೇಗೆ ಉಕ್ಕುವಾ ಕಡಲು..
ಈಗಷ್ಟೇ ನಾ ತೆರೆದ ಕಿಟಕಿಗಳಲಿ,ನುಸುಳೀತು ಬೆಳಕು
ಚಿಗುರೀತು ನಿನ್ನೆದೆಯಲ್ಲಿ ಬಿತ್ತಿದಾ ಬೀಜ
ಮಣ್ಣಿಗೂ ಬೇರಿಗೂ ಎಷ್ಟೋ ಜನುಮದ ಬಂಧ..

ಮಸಣ ಮೌನವ ಕಳೆದು
ಚಿಲಿಪಿಲಿಯ ಕರೆತಂದ
ನೀನ್ಯಾರೆಂಬ ನಿನ್ನ ಪ್ರಶ್ನೆಗಿಲ್ಲಿದೆ  ಉತ್ತರ..
ಪದಗಳನು ಹೆಕ್ಕುತಾ,ಭಾವಗಳನು ಚೆಲ್ಲುತಾ
ಅಲೆಮಾರಿಯಂತೆ ಎದೆಯೆದೆಗೆ ನಡೆವಾ
ನಾನು ‘ಕವಿ’ಯು....!!

                                  ~‘ಶ್ರೀ’
                                    ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ