ಭಾನುವಾರ, ಸೆಪ್ಟೆಂಬರ್ 27, 2015

"ನಿವೇದನೆ..."

         "ನಿವೇದನೆ..."

ಲಾಂದ್ರದಾ ಹಾಡಿನಲಿ ನನ್ನ ನೆರಳ ಹುಡುಕಿದರೆ
ಕೇಳಿದ್ದು ಮಾತ್ರ ನಿನ್ನ ಹೆಸರ ಪಿಸುಮಾತು..
ಹಿತವಾದ ಋತುಮಾನವೊಂದು
ಪಲ್ಲವಕೆ ಅಣಿಯಾಯ್ತು..

ಕನಸಲ್ಲೂ ಕೂಡ ಮಳೆಯಲ್ಲಿ ತೋಯ್ದು
ಎದುರಲ್ಲಿ ಬಂದು ನಾಚದಿರು ಗೆಳತಿ!
ಕಳೆದುಹೋಗುವೆ ನಾನು,ನನಗೇ ಸಿಗದಂತೆ
ಮಡಿವಂತಿಕೆಯ ಬೀದಿಯಲಿ
ಬಣ್ಣ ಮಾಗಿದಾ ಜಾತ್ರೆ..

ಬಯಕೆಯಾ ಕದಿರುಗಳಿಗೆ ನೀನೊಂದು ಆಕಾಶ..
ಒತ್ತಾಗಿ ನೇಯಬೇಕು ಚಂದ್ರ ಜಾರದಂತೆ..
ಗೆರೆಗಳಿಗೆ ಅಂಟಿರುವ ಪದಗಳೆಲ್ಲಾ
ಎದೆಯೆದೆಯ ಗೋಡೆಗಳ ನೆಚ್ಚಿನಾ ಸಾಲುಗಳು..
ಕೋಣೆಗಳಿಗೆ ಎಂದೂ ಅವು ಖಾಸಗಿ..

ಗಾಳಿಯಲಿ ಬೆರೆತಂತೆ ನಿನ್ನ ನೆನಪ ಸೌರಭವು
ನನ್ನೆದೆಯ ತೋಟದಲಿ
ಬೀಡುಬಿಟ್ಟಿವೆ ಚಿಟ್ಟೆಯಾ ಹಿಂಡು..
ನಿನ್ನ ಸ್ವಪ್ನದಲಿ ನಾ ಬರುವ ನಿಮಿಷವ
ಕಾಯ್ದಿರಿಸಿ ಬರೆಯುತಿದೆ
ನಿನ್ನೆದೆಯ ತಕರಾರು..
ಅನುಮತಿಸು ಒಂಚೂರು...

                                     ~‘ಶ್ರೀ’
                                         ತಲಗೇರಿ

2 ಕಾಮೆಂಟ್‌ಗಳು:

  1. "ಕನಸಲ್ಲೂ ಕೂಡ ಮಳೆಯಲ್ಲಿ ತೋಯ್ದು
    ಎದುರಲ್ಲಿ ಬಂದು ನಾಚದಿರು ಗೆಳತಿ!"

    "ನಿನ್ನ ಸ್ವಪ್ನದಲಿ ನಾ ಬರುವ ನಿಮಿಷವ
    ಕಾಯ್ದಿರಿಸಿ..."
    ಸೊಗಸಾದ ಸಾಲುಗಳು...

    ಪ್ರತ್ಯುತ್ತರಅಳಿಸಿ