ಭಾನುವಾರ, ನವೆಂಬರ್ 17, 2013

"ಆಂತರ್ಯ ಭ್ರಮರ"...

       "ಆಂತರ್ಯ ಭ್ರಮರ"...

ಸಾಯುವುದೇ ಮತ್ತೆ ನನ್ನ ಕವಿತೆ
ಎದೆಯೊಳಗೆ ಬೇರಿದ್ದೂ,ಕೊನೆಯ ಗಳಿಗೆ
ನೆನಪೆಂಬ ಶೀರ್ಷಿಕೆಗೆ ಅವಸರವೇಕೆ
ಕಾಲುದಾರೀಲಿ ತುಸು ಹೋಗೋಣ ಜೊತೆಗೆ...

ಮತ್ತೆ ಮತ್ತೆ ಸತ್ತಿರುವೆ ಅಂತರದ ಕ್ಷಣದಿ
ಹುಟ್ಟುವಾ ಮುನ್ನವೇ ಎದೆಯೊಳಗೆ ಎಷ್ಟೊಂದು ಗೋರಿ!
ತಳೆದೊಂದು ಪೂರ್ಣ ಜನುಮ ಏಕಾಂತ ಗರ್ಭದಿ
ತಂಪಾದೆ ಇಂಪಾದೆ ಅಕ್ಷರದ ಆತ್ಮದಲಿ ಮೃದುವಾಗಿ ಜಾರಿ..

ಆ ಸಂದಿಗೊಂದಿಯ ಪ್ರಾಸಗಳ ಮೊರೆತ
ಹೊರನೋಟಕಿಂತ ಒಳಧ್ವನಿಯು ತಾನೇ ಅಪೇಕ್ಷಿತ
ಈ ಮೋಹ ವ್ಯಾಮೋಹ ಅಲಂಕಾರ ವ್ಯಾಕರಣ
ಕವಿಸಮಯ,ಎಲ್ಲಕ್ಕೂ ಹೆಚ್ಚು ನಿಜ ಅಂತಃಕರಣ..

ಸೌಂದರ್ಯ ಸಮರ ಈ ಜಗದ ಅಂಗಳದಿ
ಆಂತರ್ಯ ಭ್ರಮರ ಅರಸಿದೆ ಮತ್ತೆ ಮಧು ಬಿಂದು
ಕಾಲದಾ ಕುಲುಮೆಯಲಿ ಕರಗದಿರು ಕ್ಷಣ ಬಂಧಿ..
ಹೊಳಪಿನಾ ಬೆಳೆಯಾಗು,ಅರಳಿ ನೆರಳಾಗಿ ನಿಂದು..

ಸಾಯುವುದೇ ಮತ್ತೆ ಈ ಗಳಿಗೆ ಕವಿತೆ
ಆಗಾಗ ಸತ್ತು,ಆಗಾಗ ಹುಟ್ಟುವಾ ಚಂದ್ರನಂತೆ
ನಾನು ಜಗದೊಳಗೆ,ನನ್ನೊಳಗೆ ಮತ್ತೊಂದು ಸಂತೆ
ನನ್ನ ಕವಿತೆ ಕ್ಷಣ ಅತ್ತು,ಮತ್ತೆ ನಗುವ ಆ ಕಂದನಂತೆ..

                               ~‘ಶ್ರೀ’
                                 ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ