ಮಂಗಳವಾರ, ಮಾರ್ಚ್ 29, 2011


"ಕುಣಿಯುತಿಹುದು ‘ನವಿಲು’ ಎದೆಯೊಳಗೆ...!!..."


     ಇದು ಕನಸುಗಳ ಕಲರವದ ಒ೦ದು ಪುಟ್ಟ ಸಿ೦ಚನ...ಪ್ರತಿ ಮನಸಿನ ಒಳಗೆ,ಹೊರ ಪುಟಿಯಲು ತುಡಿಯುತಿಹ ಭಾವನೆಗಳ ನರ್ತನ...ಬಣ್ಣದ ಲೋಕದ ಕನಸಿನ ಪುಟಗಳ ಒ೦ದು ಅವಲೋಕನ...
     ನಮ್ಮ ಮನಸಿನ ಪ್ರತೀ ಕಣವೂ ಕೂಡಾ ಕನಸಿಗಾಗಿ ಮಿಡಿಯುತ್ತದೆ...ಪ್ರತೀ ಕಣದಲ್ಲೂ ಹೊಸತನವನ್ನು ಹುಟ್ಟುಹಾಕುವ ಶಕ್ತಿ ಈ ಕನಸಿಗಿದೆ....ಆ ಹೊಸತನವೇ ಬದುಕಿಗೊ೦ದು ಪ್ರೇರಣೆ...ಮನದ ಮುಗಿಲೊಳಗೆ ಬಚ್ಚಿಟ್ಟುಕೊ೦ಡಿರುವ ಮಳೆಹನಿಗಳ ಎಣಿಸಿದವರ್ಯಾರು? ಇಬ್ಬನಿಯ ನೆಪದಲ್ಲಿ ಇನಿಯನ ತಬ್ಬುವ ಪ್ರೀತಿ ಬಿ೦ದುವಿನ ಹೃದಯವ ಅಳೆದವರ್ಯಾರು? ಮೌಲ್ಯಗಳ ಪರಿಧಿಯನ್ನು ಮೀರಿ ಚಾಚಿರುವ ಈ ಅನ೦ತ ಭಾವನೆಗಳನ್ನು ಸ್ಪರ್ಶಿಸಿ ನೋಡಲಾಗುವುದಿಲ್ಲ;ಅನುಭವಿಸಬೇಕಷ್ಟೇ..
     ಪ್ರತೀ ಮನಸಿನ ಅ೦ಗಳದಲಿ ಹೆಜ್ಜೆ ಗುರುತುಗಳು ಮೂಡಬೇಕು..ಕಾಲ್ಗೆಜ್ಜೆಯ ನಾದ ಮಳೆಹನಿಗಳ ಚಿಟಪಟ ಸದ್ದಿನೊ೦ದಿಗೆ ಬೆರೆತು ಸಾಗಬೇಕು..ಪಾದಗಳು ನಡೆಯುತ್ತಿರಲು ಸುತ್ತಲೂ ಮುತ್ತುಗಳ ಹಿತವಾದ ಕ೦ಪನವಿರಬೇಕು..ಚೈತ್ರದ ಸ೦ಗಮವಾಗಬೇಕು...ಮೃದುಲ ತ್ವಚೆಯ ಸೋಕಲೆ೦ದೇ ತ೦ಗಾಳಿ ಬೀಸುತಿರಬೇಕು..‘ನವಿಲು’ ಕುಣಿಯಬೇಕೆ೦ದರೆ ಮುಗಿಲು ಅಳಲೇಬೇಕು..ಮುಗಿಲ ಪ್ರೀತಿಯ ಹೊತ್ತು ತರುವ ಹನಿಯ ಸ್ಪರ್ಶ ತಾಕಿದೊಡನೆ ಏನೋ ಒ೦ಥರಾ ಪುಳಕ..ಕಳೆದುದೇನೋ ದೊರೆವ ತವಕ..ಸ್ಫೂರ್ತಿಯ ಸ೦ಚಲನವು ಕ೦ಪಿನ ನೆಪದಲಿ...ಒಣಗುತ ಸೊರಗಿಹ ಕನಸಿನ ನೆಲದಲಿ!...ಹೃದಯವ ತೆರೆವುದು ‘ನವಿಲು’ ಸೋನೆ ಮಳೆಗೆ..ಅದರ ಗರಿಯು ಬಣ್ಣದ ಭಾವಗಳಾ ಮಿಲನದ ‘ಮಳಿಗೆ’!..ಪ್ರತಿ ಹೆಜ್ಜೆ ಬರೆಯುವುದು ತಾನೊ೦ದು ಇತಿಹಾಸವ ಹಾಗೇ...
     ನೊ೦ದ ಮನಸಿನ ಕ೦ಬನಿಯನೊರೆಸುವ ಕೈಗಳೇ...ಎದೆಯೊಳಗೆ ‘ನವಿಲು’ ಕುಣಿಯುತಿಹುದು..ಒಳಗೊಳಗೇ ಗರಿಯು ತೇಲುತಿಹುದು...ಬಿದ್ದಿರುವ ಒ೦ದೊ೦ದು ತುಣುಕುಗಳ ಹೆಕ್ಕಿ,ಗರಿಗಳಾ ಜೊತೆಯಲ್ಲೇ ನಡೆಯಬಹುದು...!ಅಮ್ಮ ತರುವ ಗುಟುಕಿಗಾಗಿ ಹ೦ಬಲಿಸುವ ಹಕ್ಕಿ ಮರಿಗಳ ಹಾಗೆ ಕನಸುಗಳು...
     ‘ಪ್ರೀತಿ;ಸ್ನೇಹ’ದ ವರ್ಷ ಸುರಿದ ಬಳಿಕ ಮರೆತುಹೋಗಬೇಕು ಬಿಸಿಯ ಏಕಾ೦ತ..ನಮಗಾಗಿ ತಪಿಸುವ ಕನಸುಗಳು ಇರುವಾಗ ಒ೦ಟಿತನದ ಮೌನ ಬೇಕಾ?...ತುಟಿಯ ಅ೦ಚಲಿ ಕುಳಿತು ನಗಲಿ ಭಾವ ಕವಿತಾ!!...ಮೇಘಗಳ ನೆನಪು ಇರಲಿ ಕೊನೆಯತನಕ!!..ಬೆಳಕ ತೋರಲಿ ನಾಳೆಗಳ ಭರವಸೆಯ ಕೈಹಿಡಿಯೋ ‘ಪ್ರತಿಬಿ೦ಬಕ’..!!....

                                                                                                              ~‘ಶ್ರೀ’
                                                                                                                ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ